ತಾಳಮದ್ದಲೆಯಿಂದ ಭಾಷಾ ಪ್ರೌಢಿಮೆ: ಪೇಜಾವರ ಶ್ರೀ
ಲೇಖಕರು : ಉದಯವಾಣಿ
ಮ೦ಗಳವಾರ, ಮೇ 31 , 2016
|
ಮೇ 31 , 2016
|
ತಾಳಮದ್ದಲೆಯಿಂದ ಭಾಷಾ ಪ್ರೌಢಿಮೆ: ಪೇಜಾವರ ಶ್ರೀ
ಉಡುಪಿ :
ತಾಳಮದ್ದಲೆಯಿಂದ ಭಾಷಾ ಪ್ರೌಢಿಮೆ, ಭಾಷೆಯ ಮೇಲೆ ಹಿಡಿತ, ವಾದಕೌಶಲ, ಪುರಾಣಗಳ ಸೂಕ್ಷ್ಮ ಅಧ್ಯಯನ ಸಾಧ್ಯವಾಗುತ್ತಿದೆ ಎಂದು ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಿಳಿಸಿದರು.
ರವಿವಾರ ಪರ್ಯಾಯ ಶ್ರೀ ಪೇಜಾವರ ಮಠ, ಕನ್ನಡ ಸಂಸ್ಕೃತಿ ಇಲಾಖೆ, ಕರ್ಣಾಟಕ ಬ್ಯಾಂಕ್ ಸಹಯೋಗದಲ್ಲಿ ಯಕ್ಷಗಾನ ಕಲಾರಂಗ ರಾಜಾಂಗಣದಲ್ಲಿ ಆಯೋಜಿಸಿದ "ಶಾಪಾನುಗ್ರಹ' ತಾಳಮದ್ದಲೆ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಗೃಹಸ್ಥ-ಬ್ರಹ್ಮಚರ್ಯ: ವ್ಯಾಖ್ಯಾನ
"ಊರ್ವಶಿ ಶಾಪ' ಪ್ರಸಂಗದಲ್ಲಿ ಅರ್ಜುನ ತಾಯಿ ಸಮಾನಳಾದ ಊರ್ವಶಿಯನ್ನು ಮದುವೆಯಾಗಲು ಒಪ್ಪಲಿಲ್ಲ. ಹೀಗೆ ಒಳ್ಳೆಯತನಕ್ಕಾಗಿ ಶಾಪ ಪಡೆದರೂ ಮುಂದೆ ಒಳ್ಳೆಯದೇ ಆಯಿತು. ಅಶ್ವತ್ಥಾಮ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದಾಗ ವೇದವ್ಯಾಸರು ಅದನ್ನು ಹಿಂದಕ್ಕೆ ಪಡೆಯಲು ಸೂಚಿಸಿದರು. ಆದರೆ ಅಶ್ವತ್ಥಾಮನಿಗೆ ಹಿಂದೆ ಪಡೆಯಲು ಆಗಲಿಲ್ಲ. ಅರ್ಜುನ ಅದನ್ನು ಸಾಧಿಸಿದ. ಬ್ರಹ್ಮಧಿಚರ್ಯ ಇದ್ದವರಿಗೆ ಇದು ಸಾಧ್ಯವಿತ್ತು. ಅಶ್ವತ್ಥಾಮ ಬ್ರಹ್ಮಚಾರಿ, ಅರ್ಜುನ ಮದುವೆಯಾದವ. ಆದರೆ ಅರ್ಜುನ ಬ್ರಹ್ಮಾಸ್ತ್ರವನ್ನು ಹಿಂದಕ್ಕೆ ಪಡೆದ. ಇದೇನಿದು? ದುರ್ಯೋಧನ ಸಾಯುವಾಗ ತನ್ನ ಪತ್ನಿಯಿಂದ ಸಂತಾನ ಪಡೆದು ಹಸ್ತಿನಾವತಿಯ ಪಟ್ಟ ಕಟ್ಟು ಎಂದು ಅಶ್ವತ್ಥಾಮನಿಗೆ ಹೇಳಿದಾಗ ಮಾನಸಿಕವಾಗಿ ಒಪ್ಪಿದ್ದರಿಂದ ಬ್ರಹ್ಮಚರ್ಯ ಹೋಯಿತು. ಅರ್ಜುನ ಮದುವೆಯಾಗಿದ್ದರೂ ಪರಸ್ತ್ರೀಯರನ್ನು ಗೌರವ ಭಾವದಿಂದ ಕಾಣುತ್ತಿದ್ದ. ಇಂದು ಗೃಹಸ್ಥರಾದರೂ ಪರಸ್ತ್ರೀಯರ ಮೇಲೆ ಗೌರವ ತಾಳಿ ಬ್ರಹ್ಮಚಾರಿಗಳಾಗಬೇಕಾಗಿದೆ ಎಂದು ಶ್ರೀಗಳು ಹೇಳಿದರು.
ಸಜ್ಜನರ ಕಾಲಯಾಪನೆಗೆ ತಾಳಮದ್ದಲೆ ಉತ್ತಮ ಉದಾಹರಣೆ ಎಂದು ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹೇಳಿದರು. ಕರ್ಣಾಟಕ ಬ್ಯಾಂಕ್ ಮಹಾಪ್ರಬಂಧಕ ಸುಭಾಶ್ಚಂದ್ರ ಪುರಾಣಿಕ್, ಕಟೀಲು ಕ್ಷೇತ್ರದ ಅರ್ಚಕ ಕಮಲಾದೇವಿಪ್ರಸಾದ ಅಸ್ರಣ್ಣ ಅಭ್ಯಾಗತರಾಗಿದ್ದರು. ಕಲಾರಂಗದ ಅಧ್ಯಕ್ಷ ಗಣೇಶ ರಾವ್ ಸ್ವಾಗತಿಸಿ, ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರ್ವಹಿಸಿದರು. ಬರೆ ಕೇಶವ ಭಟ್ ತಾಳಮದ್ದಲೆ ಅವಲೋಕನ ನಡೆಸಿದರು. ಉಪಾಧ್ಯಕ್ಷರಾದ ಎಂ. ಗಂಗಾಧರ ರಾವ್, ಎಸ್.ವಿ. ಭಟ್ ಉಪಸ್ಥಿತರಿದ್ದರು.
"ಜಂಟ್ಲಮನ್ ಕಲಾವಿದ'ನಿಗೆ ಪ್ರಶಸ್ತಿ
ಕೊಲ್ಲೂರು ದೇವಳದ ಧರ್ಮದರ್ಶಿಯಾಗಿದ್ದ ಕೃಷ್ಣಪ್ರಸಾದ ಅಡ್ಯಂತಾಯರು ಗುರು ಪೆರ್ಲ ಕೃಷ್ಣ ಭಟ್ಟರ ಹೆಸರಿನಲ್ಲಿ ಸ್ಥಾಪಿಸಿದ ಪ್ರಶಸ್ತಿಯನ್ನು ಪೇಜಾವರ ಶ್ರೀಗಳಿಂದ ಪ್ರೊ| ಎಂ.ಎಲ್. ಸಾಮಗರು ಸ್ವೀಕರಿಸಿದರು. ಹಿಂದೊಮ್ಮೆ ಪಂಡಿತ ವಿಶೇಷಣದ ಪೆರ್ಲ ಕೃಷ್ಣ ಭಟ್ಟರು ಪ್ರೊ| ಸಾಮಗರನ್ನು ಇತರರಿಗೆ ಪರಿಚಯಿಸುವಾಗ "ಜಂಟ್ಲಮನ್ ಕಲಾವಿದ' ಎಂದು ಸಂಬೋಧಿಸಿದ್ದರು. "ಈಗ ಪ್ರಶಸ್ತಿಗಳ ಸರಮಾಲೆಯೇ ಕಂಡುಬರುತ್ತಿದೆ. ಮುಂದೆ ಯಾರಿಗೆ ಪ್ರಶಸ್ತಿ ಬಂದಿಲ್ಲ ಎಂದು ಹುಡುಕುವ ಕಾಲ ಬರಬಹುದು. ನಾನು ಪ್ರಶಸ್ತಿಯನ್ನು ಅಪೇಕ್ಷೆ ಪಟ್ಟವನಲ್ಲ. ಕೃಷ್ಣ ಭಟ್ಟರ ಹೆಸರಿನ ಪ್ರಶಸ್ತಿಯಿಂದ ಸಂತಸವಾಗಿದೆ' ಎಂದು ಪ್ರೊ| ಸಾಮಗ ಹೇಳಿದರು.
ಸಿದ್ಧಕಟ್ಟೆಯಲ್ಲಿ ಪ್ರಶಸ್ತಿ ಪ್ರದಾನ
ಮಟ್ಟಿ ಮುರಲೀಧರ ರಾವ್ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿಯನ್ನು ಸಿದ್ಧಕಟ್ಟೆಗೆ ತೆರಳಿ ಅಜ್ಜಿಬೆಟ್ಟು ನಿವಾಸದಲ್ಲಿ ಹಿರಿಯ ಕಲಾವಿದ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿಯವರಿಗೆ ಪ್ರದಾನ ಮಾಡಲಾಯಿತು. ಯಕ್ಷಗಾನ ಅಕಾಡೆಮಿ ಸದಸ್ಯ ಪಿ. ಕಿಶನ್ ಹೆಗ್ಡೆಯವರು ಅಭಿನಂದಿಸಿದರು. ಕಲಾರಂಗದ ಕೆ.ಗಣೇಶ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್, ಎಂ. ಗಂಗಾಧರ ರಾವ್, ವಿ.ಜಿ. ಶೆಟ್ಟಿ, ಭುವನಪ್ರಸಾದ್ ಹೆಗ್ಡೆ, ಪೃಥ್ವಿರಾಜ ಕವತ್ತಾರ್ ಉಪಸ್ಥಿತರಿದ್ದರು. ಜಯಂತಿ ವಿಶ್ವನಾಥ ಶೆಟ್ಟಿಯವರನ್ನು ಶಿಲ್ಪಾ ಕಿಶನ್ ಹೆಗ್ಡೆ ಗೌರವಿಸಿದರು. ರಾಜಾಂಗಣದಲ್ಲಿ ನಡೆಯಬೇಕಾದ ಪ್ರಶಸ್ತಿ ಪ್ರದಾನ ವಿಶ್ವನಾಥ ಶೆಟ್ಟಿಯವರ ಮನೆಯಲ್ಲಿ ನಡೆಯಿತು.
ಕೃಪೆ :
udayavani
|
|
|